ಮಡಿ ಭಾಷೆ, ಮಡಿ ಭಾಷೆ

ಮಡಿ ಭಾಷೆ, ಮಡಿ ಭಾಷೆ
ಇದನ್ನು ಕೊಂಚ ತುಂಟತನದ ರೀತಿಯಲ್ಲಿ ಬರೆದಿರುವೆ. ತಮಾಷೆಗೆ ಸತ್ಯವನ್ನು ಕಾಣಿಸುವ ಶಕ್ತಿ ಇರುತ್ತದಲ್ಲವೆ? ಹಾಗೆ ನೋಡಿದರೆ ತಮಾಷೆ ತುಂಬ ಸೀರಿಯಸ್ಸಾದ ಮನಸ್ಸಿನಿಂದ ಮಾತ್ರ ಹುಟ್ಟಬಲ್ಲದು!
ಮಡಿ ಎಂದರೆ ಶುದ್ಧ ಅಂತಲೂ ಹೌದು, ಮಡಿ ಅಂದರೆ ಸಾಯಿ ಅಂತಲೂ ಹೌದು. ಯಾವುದೇ ಭಾಷೆ ತುಂಬ ಮಡಿಯಾದರೆ ಸತ್ತೇ ಹೋಗುತ್ತದೆ. ಸಂಸ್ಕೃತ. ಲ್ಯಾಟಿನ್, ಗ್ರೀಕ್ ಇತ್ಯಾದಿಗಳೆಲ್ಲ ತುಂಬ ಮಡಿವಂತ ಭಾಷೆಗಳಾದವು, ಆಯಾ ಭಾಷಾ ಪಂಡಿತರಿಂದ. ಹಾಗೆ ಅವರು ಮಡಿ ಮಾಡಿ ಮಾಡಿ ಇವತ್ತು ಅವು ಅಷ್ಟೇನೂ ಮಡಿಯಲ್ಲದ ಭಾಷೆಗಳಲ್ಲಿ ಮಾತ್ರ ಪದಗಳಾಗಿ ಉಳಿದುಕೊಂಡಿವೆ.
ಇಂಗ್ಲಿಷು ಇದೆಯಲ್ಲ, ಅದರಲ್ಲಿ ಶೇ ೯೦ ಬೇರೆ ಭಾಷೆಯ ಪದಗಳೇ ಇವೆ. ಟವಲ್, ಟೊಮೆಟೊ, ಕ್ವೆಶ್ಚನ್, ಲ್ಯಾಂಗ್ವೆಜ್, ವಕಾಬುಲರಿ ಇಂಥ ನಾವು ಇಂಗ್ಲಿಷ್ ಅಂದುಕೊಂಡ ಪದಗಳು ಎಲ್ಲೆಲ್ಲಿಂದಲೋ ಬಂದು ಇಂಗ್ಲಿಷಿನಲ್ಲಿ ಮನೆ ಮಾಡಿಕೊಂಡಿವೆ. ಇತ್ತೀಚಿನ ಆಕ್ಸ್-ಫರ್ಡ್ ಡಿಕ್ಷನರಿಯಲ್ಲಿ ಭಾರತೀಯ ಮೂಲದ ಸುಮಾರು ಎಂಟು ಸಾವಿರದಷ್ಟು ಪದಗಳ ಪಟ್ಟಿ ಕಾಣುತ್ತದೆ. ಆಕ್ಸ್ ಅಂದರೆ ಗೋವುಗಳು, ಫರ್ಡ್ ಅಂದರೆ ತೀರ್ಥ. ತೀರ್ಥ ಅಂದರೆ ನದಿ ದಾಟುವ ಜಾಗ. ಅದಕ್ಕೇ ಆ ಊರಿನ ಹೆಸರನ್ನು ಗೋತೀರ್ಥ ಎಂದು ಬದಲಾಯಿಸಿದ್ದೂ ಇದೆ. ಇದು ಕಡ್ಡಿಪುಡಿ ಕರಿಬಸಯ್ಯ ಅನ್ನುವ ಹೆಸರನ್ನು ಕಾಷ್ಠಚೂರ್ಣಕಾಳವೃಷಭಾರ್ಯ ಕಾಷ್ಠ (ಕಡ್ಡಿ) ಚೂರ್ಣ (ಪುಡಿ) ಕಾಳ (ಕರಿ) ವೃಷಭ (ಬಸವ) ಆರ್ಯ (ಅಯ್ಯ) ಅಂತ ಬದಲಾಯಿಸಿದ ಹಾಗೆ. ಸಿಗ್ನಲ್ ಅನ್ನುವುದನ್ನು ಧೂಮ್ರಚಾಲಿತ ಬಹುಚಕ್ರಶಕಟ ಗಮನಾಗಮನಸೂಚೀ ಲೋಹಪಟ್ಟಿಕಾ ಅಂದಹಾಗೆ. ಮಡಿ ಅತಿಯಾದರೆ ಹೀಗಾದೀತು. ಸಂಸ್ಕೃತವು ದೇಸೀಭಾಷೆಗಳಿಂದ ಪದಗಳನ್ನು ತೆಗೆದುಕೊಂಡೇ ಇಲ್ಲ ಎಂದಲ್ಲ, ತೀರ ಕಡಮೆ. ಸಾವಿರಕ್ಕೆ ಒಂದು ಹತ್ತು ಇದ್ದಾವು.
ಇಂಗ್ಲಿಷಿನ ಗತಿ ಇನ್ನೊಂದು ಥರದ್ದು. ಅದು ಹೊಟ್ಟೆಬಾಕನಂತೆ ಎಲ್ಲ ಪದಗಳನ್ನೂ ಗಿಡಿದುಕೊಂಡು ಎಗ್ಗಿಲ್ಲದೆ ಸಿಗ್ಗಿಲ್ಲದೆ ಜಗತ್ತಿನ ಮುಖ್ಯಭಾಷೆ ಆಯಿತು. ಅಷ್ಟಾದರೂ ಜಗತ್ತಿನಲ್ಲಿ ಅತಿ ಹೆಚ್ಚು ಜನ ಬಳಸುವ ಭಾಷೆಗಳ ಪೈಕಿ ಇಂಗ್ಲಿಷಿಗೆ ಎಂಟನೆಯ ಸ್ಥಾನವಂತೆ.
ಅಲ್ಲ ಭಾಷೆಯೊಂದು ವ್ಯಾಪಕವಾಗುವುದಕ್ಕೆ ಕೇವಲ ಭಾಷೆ ಬಳಸುವುದಷ್ಟೇ ಕಾರಣವಾಗುವುದಿಲ್ಲ. ಆದರೂ ಪೆಟ್ರೋಲ್ ಉಳಿಸಿ, ಕನ್ನಡ ಉಳಿಸಿ ಎಂಬ ಎರಡು ಘೋಷಣೆಗಳನ್ನೂ ಒಂದೇ ಥರ ಅಂತ ತಿಳಿದು ಪೆಟ್ರೋಲ್ ಉಳಿಸುವುದಕ್ಕೆ ಪೆಟ್ರೋಲು ಕಡಮೆ ಬಳಸಬೇಕು, ಕನ್ನಡವನ್ನು ಉಳಿಸುವುದಕ್ಕೆ ಕನ್ನಡವನ್ನೂ ಕಡಮೆ ಬಳಸಬೇಕು ಅಂತ ತೀರ್ಮಾನಮಾಡುವುದು ತಪ್ಪು. ಕನ್ನಡ ಹೆಚ್ಚು ಹೆಚ್ಚು ಬಳಸಿದರೇ ಕನ್ನಡ ಉಳಿಯುವುದು. ಹಾಗೆ ಬಳಸುವಾಗ ಕಲಿತ ನಾವು ಅಲ್ಲ, ಬಹುಸಂಖ್ಯೆಯ ಜನ ಯಾವಯಾವದನ್ನೆಲ್ಲ ಸ್ವೀಕರಿಸಿದ್ದಾರೋ ಅದೆಲ್ಲವೂ ಕನ್ನಡವೇ ಅಂತ ತಿಳಿಯಬೇಕು. ವ್ಯಾಕರಣದ ಕೆಲಸ ಭಾಷಾಪೋಲೀಸರ ಕೆಲಸದಂತಲ್ಲ. ಜೀವಂತವಾದ ಭಾಷೆಯಲ್ಲಿ ಪ್ರತಿತಲೆಮಾರಿಗೂ ಸಾವಿರ ಪದ ಸಾಯುತ್ತಿರುತ್ತವೆ, ಸಾವಿರಪದ ಹೊಸದಾಗಿ ಬಂದು ಸೇರಿಕೊಳ್ಳುತ್ತಿರುತ್ತವೆ, ಇನ್ನು ಸಾವಿರಪದಗಳು ಅರ್ಥವ್ಯತ್ಯಾಸಮಾಡಿಕೊಳ್ಳುತ್ತಿರುತ್ತವೆ. ಇವೆಲ್ಲವನ್ನು ಕುತೂಹಲದಿಂದ ಗಮನಿಸಿ ತಾರ್ಕಿಕವಾಗಿ ವಿವರಿಸುವುದು ಮಾತ್ರ ವ್ಯಾಕರಣಕಾರರ ಕೆಲಸ.
ಭಾಷೆ ನದಿಯಂತೆ, ಹೊಳೆಯಂತೆ ಅನ್ನುವ ಸುಪ್ರಸಿದ್ಧ ಮಾತು ಇದೆ. ನದಿಯೇ ಆಗಲಿ, ಹೊಳೆಯೇ ಆಗಲಿ ಅದರ ಪಾಡಿಗೆ ಅದು ಹರಿಯುತ್ತಿರುತ್ತದೆ. ಅದಕ್ಕೆ ಮಡಿವಂತೆ ದೊಣೆನಾಯಕರ ಅಪ್ಪಣೆ ಬೇಡ ಅಲ್ಲವೆ?
ಆದರೂ ತೀರ ತಪ್ಪು ತಪ್ಪಾಗಿ ಭಾಷೆ ಬಳಸಬಾರದು ಅನ್ನುವುದು ಕೂಡ ನಿಜವೇ. ದಯವಿಟ್ಟು ಗಮನಿಸಿ, ಅನಕ್ಷರಸ್ಥರು ಕೂಡ, ಎಂದೂ ವ್ಯಾಕರಣ ಓದದೆ ಇರುವವರು ಕೂಡ ತಪ್ಪು ವಾಕ್ಯಗಳನ್ನು ಬಳಸುವುದಿಲ್ಲ. ಇರುವ ತೊಡಕೆಲ್ಲ ಬರವಣಿಗೆಗೆ ಬಂದಾಗ ಹುಟ್ಟಿಕೊಳ್ಳುತ್ತದೆ. ಬರವಣಿಗೆ ಕೃತಕ, ಮತ್ತು ಅಸಹಜ, ಆಡುಮಾತಿಗೆ ಹೋಲಿಸಿದರೆ. ಅದರದೇ ಬೇರೆ ನಿಯಮಗಳು. ಆಡುಮಾತಿನ ಬನಿಯನ್ನೆಲ್ಲ ಬರವಣಿಗೆಯಲ್ಲಿ ತರುವುದು ಕೂಡ ಸಾಧ್ಯವಿಲ್ಲ.
ಇರಲಿ, ಅದು ಬೇರೆ ವಿವರವಾದ ಚಿಂತನೆಗೆ ವಸ್ತು. ಇಷ್ಟೇ. ಇನ್ನೊಬ್ಬರ ಮಾತಿನಲ್ಲಿ ದೋಷಗಳನ್ನೇ ಹುಡುಕುವುದು ಅದೇ ದೊಡ್ಡ ದೋಷ. ಪ್ರೀತಿಯಿಂದ ಇರುವ ದೋಷಗಳನ್ನು ತಿದ್ದಬೇಕು. ತಪ್ಪೇ ಮಾಡದ ಮನುಷ್ಯರು, ತಪ್ಪನ್ನೇ ಬರೆಯದ ಲೇಖಕರು ಯಾರೂ ಇಲ್ಲ. ಹಾಗೆ ನೋಡಿದರೆ ಎಂಥ ವ್ಯಕ್ತಿಯಲ್ಲೂ ಎಂಥ ಬರವಣಿಗೆಯಲ್ಲೂ ದೋಷಗಳನ್ನು ಸುಲಭವಾಗಿಯೋ ಕಷ್ಟಪಟ್ಟೋ ಹುಡುಕಬಹುದು. ಆದರೆ ಅಂಥ ಕೆಲಸದಿಂದ ಮನಸ್ಸು ಮುರಿಯುತ್ತದೆ, ಪ್ರೀತಿ ಹುಟ್ಟುವುದಿಲ್ಲ.
ಕೊನೆಗೆ ಒಂದು ಮಾತು. ಶುದ್ಧತೆ ಅನ್ನುವುದು ನಿಸರ್ಗದಲ್ಲಿ ಇದೆಯೋ ಅಥವ ನಮ್ಮ ಮನಸ್ಸಿನ ಕಲ್ಪಿತವೋ? ಅತಿ ಶುದ್ಧತೆಯ ಆಸೆ ಅಸ್ಪೃಶ್ಯತೆಯಂಥ ಆಚರಣೆಗೆ ಕಾರಣವಾದದ್ದು ನಮಗೆಲ್ಲ ತಿಳಿಯದೇ! ತೀರ ಪರಿಶುದ್ಧ ಚಿನ್ನದಿಂದ ಆಭರಣ ಮಾಡಿಸಲು ಸಾಧ್ಯವೇ? ಸ್ವಚ್ಛತೆಯೇ ಬೇರೆ, ಮಡಿವಂತಿಕೆಯೇ ಬೇರೆ. ಸ್ವಚ್ಛತೆ ಅಪೇಕ್ಷಣೀಯ, ಅಗತ್ಯ. ಮಡಿವಂತಿಕೆ ಸಂಕುಚಿತ, ಭೀತ ಮನಸ್ಸಿನ ಲಕ್ಷಣ.

Comments

ಇಸುವಿನ ಬಗ್ಗೆ

ಡಿಯರ್ OLN,
ನಮ್ಮ ಕಾಲೇಜಿನ ಲೆಕ್‍ಚರ್ ಒಬ್ಬರು ತರಗತಿಗೆ ಸರಿಯಾಗಿ ಬರದ ಹುಡುಗನ ಕುರಿತು ಹೀಗೆ ಎಂದರು, "you come or come, go or go, what my father's bundle is going?"! ಅವರಿಗೆ ಹೀಗೆ ಹೇಳಬೇಕಿತ್ತು "ನೀನು ತರಗತಿಗೆ ಬಂದರೆ ಬಾ, ಬಿಟ್ಟರೆ ಬಿಡು, ನಮ್ಮಪ್ಪನ ಗಂಟೇನು ಹೋಗಬೇಕು?". ಒಂದು ನುಡಿಯಲ್ಲಿ ಯೋಚನೆ ಮಾಡಿ, ಇನ್ನೊಂದು ನುಡಿಯಲ್ಲಿ ಹೇಳುವಾಗ/ಬರೆಯುವಾಗ ಹೀಗೆ ನುಡಿಯ ಬೇಕಾಬಿಟ್ಟಿ ಬಳಕೆಯಾಗುತ್ತದೆ. ಸರಿಯಾದ ಇಂಗಲಿಸ್ ಬರದವರನ್ನು ಹೇಗೆ ಕೆಳಮಟ್ಟದಲ್ಲಿ ಕಾಣುತ್ತೇವೆಯೋ ಹಾಗೆಯೇ ಕನ್ನಡ ಬಾರದವರ ಬಗ್ಗೆ ಸಹ.
"ಇಸು" ಇದರ ಬಳಕೆ ಹೀಗಿದೆ.
ಮಾಡು : ನಾನು ಮಾಡುವುದು
ಮಾಡಿಸು : ಇನ್ನೊಬ್ಬ ಮಾಡುವಂತೆ ಮಾಡುವುದು
ಮಾಡಿಸಿಸುವುದು : ಇನ್ನೊಬ್ಬ ಮತ್ತೊಬ್ಬನಿಂದ ಮಾಡಿಸುವಂತೆ ಮಾಡುವುದು
ಮಾಡುವಿಕೆ,ಮಾಡಿಸುವಿಕೆ,ಮಾಡಿಸಿಸುವಿಕೆ ಇವು ಹೆಸರುಪದಗಳು.
"ಕೇಳು" ಎಂಬುದಕ್ಕೆ ನಾವು "ಪ್ರಶ್ನಿಸು" ಎಂದು ಬಳಕೆ ಮಾಡುತ್ತೇವೆ. ಹೀಗೆ ಬಳಕೆ(ಬಳಸು ಕೂಡ ತಪ್ಪು)ಮಾಡುವುದು ತಪ್ಪು ಎಂದು ನನ್ನ ತಿಳಿ. ಏಕೆಂದರೆ,
ಕೇಳು - ಪ್ರಶ್ನಿಸು
ಕೇಳಿಸು - ಪ್ರಶ್ನಿಸಿಸು
ಕೇಳಿಸಿಸು - ?
ಇದು ನಾಳೆ ಕೊಶ್ಚನ್ನಿಸು(quotionnisu) ಎಂದೇಕೆ ಆಗಬಾರದು? ನಾವು ಹೀಗೆ ಮಾಡು ತೆಗೆದು ಇಸು ಸೇರಿಸಿ ಅದನ್ನು ಕೆಲಸಪದವಾಗಿಸಿದರೆ 'ಕೇಳಿಸಿಸು' ಎಂಬ ಪದ ತನ್ನ ತಿಳಿವನ್ನು(ಅರ್ಥವನ್ನು) ಕಳೆದುಕೊಂಡು ಸತ್ತು ಹೋಗುತ್ತದೆ. ಹೀಗೆಯೇ ಏಸೋ ಪದಗಳು ಸತ್ತು ಹೋಗಿವೆ ಕೂಡ, ಅದುದರಿಂದ ಎಲ್ಲ ಕನ್ನಡ ಬರಹಗಾರರು ಒಂದಾಗಿ ಕನ್ನಡವನ್ನು ಸರಿಯಾಗಿ ಬಳಕೆ ಮಾಡಬೇಕಿದೆ, ಒಂದು ನುಡಿಯನ್ನು ತಪ್ಪಾಗಿ ಬಳಕೆ ಮಾಡುವುದು ಅದರ ಬೆನ್ನಿಗೆ ಚೂರಿ ಇರಿದಂತೆ ಅಲ್ಲವೇ?

Post new comment

The content of this field is kept private and will not be shown publicly.
  • Allowed HTML tags: <a> <em> <strong> <cite> <code> <ul> <ol> <li> <dl> <dt> <dd>
  • Lines and paragraphs break automatically.

More information about formatting options