ಬೇಂದ್ರೆ: ಪ್ರಾರ್ಥನೆ: ಕನ್ನಡ, ಸಂಸ್ಕೃತ

ಮೊದಲು ಸುಪ್ರಸಿದ್ಧವಾದ ಈ ಪ್ರಾರ್ಥನಾ ಶ್ಲೋಕವನ್ನು ನೋಡಿ:
ಓಂ ಸಹನಾವವತು ಸಹನೌ ಭುನಕ್ತು
ಸಹವೀರ್ಯಂಕರವಾವಹೈ
ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ

ಇದು ಕನ್ನಡದಲ್ಲಿ ಹೊಸ ಹುಟ್ಟು ಪಡೆದಿರುವ ಬಗೆಯನ್ನು ನೋಡಿ:

ಕೂಡಿ ಓದಿ, ಕೂಡಾಡಿ, ಕೂಡಿ
ಅರಿಯೋಣ ಕೂಡಿ ಕೂಡಿ
ಕೂಡಿ ತಿಂದು, ಕೂಡುಂಡು ಕುಡಿದು
ದುಡಿಯೋಣ ಕೂಡಿ ಕೂಡಿ

ಕೂಡಿ ನಡೆದು, ಒಡಗೂಡಿ ಪಡೆದು
ನುಡಿ ಹೇಳಿ ಕೇಳಿ ಕೂಡಿ
ಕೂಡಿ ಬೆಳೆದು ಬೆಳಗೋಣು
ದೇವರೊಲು ಕೂಡಿ ಕೂಡಿ
[೧೯೫೧, “ಗಂಗಾವತರಣ” ಸಂಕಲನ]

ಈ ಸುಪ್ರಸಿದ್ಧ ಪ್ರಾರ್ಥನಾ ಪದ್ಯ ಹೀಗೆ ಕನ್ನಡಗೊಂಡಿದೆ ಬೇಂದ್ರೆಯವರಿಂದ: ದೇವ ಎಂಬುದೊಂದು ಬಿಟ್ಟರೆ ಸಂಸ್ಕೃತಪದ ಯಾವುದೂ ಇಲ್ಲದಂತೆ, ಕನ್ನಡದ್ದೇ ಪ್ರಾರ್ಥನೆ ಎಂಬಂತೆ! ಸಂಸ್ಕೃದಲ್ಲಿರುವ ಸಹ ಎಂಬ ಮಾತು ಪುನರುಕ್ತವಾಗಿರುವುದು ಗಮನಕ್ಕೇ ಬರುವುದಿಲ್ಲ. ಬೇಂದ್ರೆ ಅನುವಾದದಲ್ಲಿ ಕೂಡಿ ಎಂಬ ಮಾತು ಮತ್ತೆ ಮತ್ತೆ ಕಿವಿಗೆ ತಾಗುತ್ತ ಸಹಬಾಳುವೆಯ ಆದರ್ಶವನ್ನು ಮನಸ್ಸಿಗೆ ತರುವಂತಿದೆ. ಮನಸ್ಸಿನಲ್ಲಿ ಭಾವ ಇದ್ದಾಗ ತಾನೇ ಪ್ರಾರ್ಥನೆಗೆ ಬೆಲೆ! ಕನ್ನಡದ ಈ ನುಡಿಗಳು ಕಿವಿಗೊಟ್ಟು ಕೇಳಿದಾಗ ಭಾವವನ್ನು ತುಂಬುವಂತಿವೆಯಲ್ಲವೆ? ಚಿರ ಪರಿಚಿತವಾದ ನುಡಿಗಳನ್ನೂ ಹೊಸತುಗೊಳಿಸಿದಾಗ, ಇಲ್ಲಿ ಆಗಿರುವಂತೆ, ಅನುವಾದಕ್ಕೂ ಬೆಲೆ, ಅಲ್ಲವೆ? ಪ್ರಾರ್ಥನೆಗಳೂ, ನಮ್ಮ ಶಾಲಾದಿನಗಳಿಂದಲೇ, ದೈನಿಕ ಅಭ್ಯಾಸಗಳಾಗಿ, ನಮ್ಮ ಮನಸ್ಸು ಮುಟ್ಟದೆ ಮೊಂಡಾಗಿರುವಾಗ ಹೀಗೆ ಅದಕ್ಕೆ ಹೊಸರೂಪಕೊಟ್ಟುಕೊಳ್ಳುವುದು ವಾಸಿಯೇನೋ.

Comments

Post new comment

The content of this field is kept private and will not be shown publicly.
  • Allowed HTML tags: <a> <em> <strong> <cite> <code> <ul> <ol> <li> <dl> <dt> <dd>
  • Lines and paragraphs break automatically.

More information about formatting options